top of page
Search

ಕಥಾಸರಿತ್ಸಾಗರ

  • ಜಿ.ಕೆ.ರವೀಂದ್ರಕುಮಾರ್
  • Apr 21, 2024
  • 1 min read

Updated: Jun 25, 2024



ಪ್ರತಿ ಅಕ್ಷರವೂ ಏನೋ ಹೇಳಬೇಕೆಂದು ಬರುವಲ್ಲಿ

ಏನೆಂದುಕೇಳದೆ

ನನ್ನ ಕಥೆ ಹೇಳಲು ಬಳಸಿಕೊಂಡ ನನಗೆ

ಎಂದಾದರೂ ಒಂದು ದಿನ ಅವುಗಳ ಕಥೆ ಕೇಳಬಹುದು ಎಂದು


ನನ್ನ ಹಸಿವ ಹಿಂಗಿಸುವ ಭರದಲ್ಲಿ

ಒಂದು ತುತ್ತಿನ ಕಥೆಯನ್ನೂ ಕೇಳಲಾಗಿಲ್ಲ ಇದುವರೆಗೂ

ನನಗಾಗಿ ತೇದ ಪೆನ್ನು ರಿಫಿಲ್ಲುಗಳಿಗೆ

ಧನ್ಯವಾದ ಅರ್ಪಿಸದೆ ಬಿಸಾಕಿದ ವಿಷಾದವೆ ತುಂಬಿಕೊಂಡು


ಅಕ್ಷರದ ಚಡಪಡಿಕೆಯಲ್ಲಿ ಪದಗಳು ಬಾಳಿ

ತೆತ್ತ ತುತ್ತುಗಳಲ್ಲಿ ಔತಣವು ಕೂಡಿ

ಯಾರೋ ಹೋಗಿ ಏನೋ ಬಾಳಿ


ಕಥೆಯೊಳಗೆ ವಾಕ್ಯದೊಳಗೆ ಪದ ಅಕ್ಷರದೊಳಗೆ

ಅನ್ನದೊಳಗೆ ಅಗುಳಿನೊಳಗೆ ತುತ್ತು ಹಸಿವಿನೊಳಗೆ

ಇಂಗಿ ಇರುಕಿ ಇಳಿದು ಇರುವಂಥ ಹೊತ್ತಿನಲ್ಲಿ

ಚರಿತೆಯನು ಕೆತ್ತಿ


ಕೆತ್ತಿಸಿಕೊಂಡ ಚರಿತೆಗಳಲ್ಲಿ ಇರುಕಿದ ಕಥೆಗಳ ಹುಡುಕಲು

ಹೊರಟ ಎಲ್ಲರೂ ಅವರ ಕಥೆಗಳ ಹೇಳುತ್ತ

ಕೈಯೊಳಗಿನ ಪರಿಕರಗಳು ತಮ್ಮ ಕಥೆ ಹೇಳುತ್ತ

ಇಟ್ಟ ಹೆಜ್ಜೆ ಊರಿದ ನೆರಳು ತುಳಿಸಿಕೊಂಡ ನೆಲ

ಎಲ್ಲವೂ ಕಥೆಗಳ ಪೇರಿಸುತ್ತ


ಕಥಾಸರಿತ್ಸಾಗರವ ದಾಟದೆ

ದಿನ ಮುಟ್ಟಿ ಕಾಲ ದಾಟುವುದು ಎಲ್ಲಿ?

ಮಣ್ಣಾಗುವ ಎಲ್ಲವೂ ಕಲ್ಲ ಕಥೆಯಾಗಿ ಬಾಳಲು

ನಿಂತ ಕಲ್ಲುಗಳು ಮಾತ್ರ ಒಂಟಿ ಒಂಟಿ ಮುಂದೆಯೂ


ಮುಗಿದ ಸಾಮ್ರಾಜ್ಯದ ಮೆಲುಕಲ್ಲಿ

ಅವೇ ಅಕ್ಷರಗಳು ಉರುಳಿ

ಅವೇ ಕಥೆಗಳು ಕರಗಿ

ಮತ್ತೆ ತಳೆದ

ನಾನು ಯಾವ ಕಥೆಯ ಪುರಾತನ ಸಾಕ್ಷಿಯೋ

ವರ್ತಮಾನದ ಭಿಕ್ಷೆಯೋ

ನಾಳಿನ ಹಸಿವೆಯೋ


ಕಥೆಯ ಜಂಗುಳಿಯಲ್ಲಿ ಒಂದನೊಂದ ದಾಟಿ ತಳ್ಳಿ

ಈ ಕಥೆಯ ಪಾತ್ರ ಅಲ್ಲಿ

ಆ ಕಥೆಯ ಪಾತ್ರ ಇಲ್ಲಿ

ಶುರುವಾದ ಕಥೆಯಲ್ಲಿ ಇದ್ದವರು ಈಗ ಎಲ್ಲಿ?


ಸಾಕು ಪ್ರಶ್ನೆಯ ಮಾಲೆ

ಲೈಟ್ಸ್ ಆನ್ ಆದವು ಸುಮ್ಮನಿರಿ|

ಈಗೇನಿದ್ದರೂ ಬರೀ ಚಿತ್ರಕಥೆ

ಅಂತೆ


-ಜಿ.ಕೆ. ರವೀಂದ್ರಕುಮಾರ್


 
 
 

Recent Posts

See All
ಚೂರು ಪಾರು ಚರಿತೆ

ಎಷ್ಟೇ  ಬಳಿ ಬಳಿದು ನೆಕ್ಕಿದರೂ ಅಷ್ಟಿಷ್ಟು ಉಳಿಯುವ ಸಾರು ತಟ್ಟೆಯಲ್ಲಿ ಎಷ್ಟೇ ಎಳೆದೆಳೆದು ಚೀಪಿದರೂ ಚೂರು ಪಾರು ಬೆರಳಿನಲ್ಲಿ ನಾಕಾರು ಇರುವೆಗಳಿಗೆ ವಾರಕ್ಕಾಗುವಷ್ಟು...

 
 
 
ಮರವನಪ್ಪಿದ ಬಳ್ಳಿ

ಮರವನಪ್ಪಿದ ಬಳ್ಳಿಯನ್ನುಯನ್ನು ಮರವೇ ಅಪ್ಪಿರಬಹುದು ಹಾಗೂ ಇರಬಹುದು ಹೀಗೂ ಇರಬಹುದು ಭಾಷೆಯಿಲ್ಲದ ಜೀವಗಳು ದಾವೆ ಹೂಡಲಾರವು   ಎದೆ ಕೊರಳು ಗಲ್ಲ, ಬೆನ್ನು ಆತುಕೊಳ್ಳುವ...

 
 
 
ಹಾಕಿ ಹಾಕಿ

ಒಂದು   ಹಾಲಲ್ಲಾದರೂ ಹಾಕಿ ನೀರಲ್ಲಾದರೂ ಹಾಕಿ ಮೊದಲು ಒಂದು ಗೋಲು ಹಾಕಿ   ಆಗ ಹೀಗಿರಲಿಲ್ಲ ಧ್ಯಾನವಿದ್ದ ಕಾಲದಲ್ಲಿ ಚಂದ್ರ ನಗುತ್ತಲೇ ಇದ್ದ   ಚಂದ್ರ ನಗದಿದ್ದರೇನು...

 
 
 

Commenti


©2021 by G K RAVEENDRAKUMAR. Proudly created with Wix.com

bottom of page