top of page
Search

ಜಗವೂ ಜಗಕೆ ಆಗದಿರುವಲ್ಲಿ

  • ಜಿ.ಕೆ.ರವೀಂದ್ರಕುಮಾರ್
  • Sep 10, 2023
  • 1 min read

ಕಸಿವಿಸಿಯ ಕವಲಲ್ಲಿ ಯಾರೋ ಹೆಚ್ಚಿಟ್ಟ ಹೋಳು

ಸೆಳೆದು ಕರೆದು ಎಳೆದು ಸವಿಯುವ ವೇಳೆ

ಮುಟ್ಟಿ ನೋಡಿಕೋ ಮೈಯ ಹಣ್ಣಿನಂಥ ಮನವ


ಹಿಡಿಯೋ ಹುಡಿಯೋ ಅರಿವಾಗದ ಗಲಿಬಿಲಿಯೋ

ಹೋಳೋ ಗೀಳೋ ರುಚಿ ಬಾಳಿನ ಸೀಳೋ

ತೆತ್ತುಕೊಳ್ಳುವುದಿದೆಯಲ್ಲಾ ಮನದ ಮಾಯಾರಿಕೆಗೆ


ದಾರಿ ಮುಚ್ಚಿದ ಶಬ್ದಕ್ಕೆ ಹೊಕ್ಕಳ ದಾಹ

ತಳೆಯಲಾಗದ ಕವಿತೆಗೆ ಶಬ್ದದ ಕೊರೆ


ಮೊರೆಯಿಡುವ ಎಲ್ಲರೂ ಕವಲಾಗಿ ಹೋಳಾಗಿ ನೆಲದ ಪಾಲಾಗುವಲ್ಲಿ

ಯಾರು ಯಾರನ್ನು ಕ್ಷಮಿಸುವರು


ಮತ್ತು ಕ್ಷಮಿಸಲಾರರು


|


ಹಿತ್ತಲೆನ್ನುವುದಿದೆಯಲ್ಲಾ ಎದೆಯೆನ್ನುವುದಿದ್ದ ಮೇಲೆ

ತೇಲುವುದಿದೆಯಲ್ಲಾ ಮುಳುಗಿಸುವ ನೀರ ಮೇಲೆ

ಹಿಡಿಯಲಾಗದ ಕಾಲಕ್ಕೆ ಯಾವುದೋ ಒಂದು ದೇಶ


ಒಂದು ಕೋಟೆ

ಒಂದು ಗಿಣಿ

ಒಂದು ಜೀವ


ಕಥೆಯು ಸಾಗುವಲ್ಲಿ ಮಧ್ಯೆ ಮಧ್ಯೆ ಕಾಡುವ

ಎದೆಯ ಮೂಕ ಸಾಲು

ಮಡಿಲಂತೆ ಮಡುವಂತೆ ಹಾಡುವಂತೆ


ಯಾರಿಗಾಗಿ ಯಾರು ಹಾಡುವರು

ಮತ್ತು ಹಾಡಲಾರರು


|


ಜಗವೂ ಜಗಕೆ ಆಗದಿರುವಲ್ಲಿ

ಜಗವೇ ಬಾಳುವುದಿದೆಯಲ್ಲಾ


ಅದರ ಗುಟ್ಟಿನ ಸಾಲಿಗಾಗಿ

ಕಾಯುವಲ್ಲಿ

ತಳಮಳಿಸುವಲ್ಲಿ


ಅತ್ತಾರೆ ನಕ್ಕಂತೆ ನಕ್ಕಾರೆ ಅತ್ತಂತೆ

ಮರೆತವರು ಯಾರು

ಮರೆತು ಹೋದವರು ಯಾರು?


-ಜಿ.ಕೆ. ರವೀಂದ್ರಕುಮಾರ್


 
 
 

Recent Posts

See All
ಚೂರು ಪಾರು ಚರಿತೆ

ಎಷ್ಟೇ  ಬಳಿ ಬಳಿದು ನೆಕ್ಕಿದರೂ ಅಷ್ಟಿಷ್ಟು ಉಳಿಯುವ ಸಾರು ತಟ್ಟೆಯಲ್ಲಿ ಎಷ್ಟೇ ಎಳೆದೆಳೆದು ಚೀಪಿದರೂ ಚೂರು ಪಾರು ಬೆರಳಿನಲ್ಲಿ ನಾಕಾರು ಇರುವೆಗಳಿಗೆ ವಾರಕ್ಕಾಗುವಷ್ಟು...

 
 
 
ಮರವನಪ್ಪಿದ ಬಳ್ಳಿ

ಮರವನಪ್ಪಿದ ಬಳ್ಳಿಯನ್ನುಯನ್ನು ಮರವೇ ಅಪ್ಪಿರಬಹುದು ಹಾಗೂ ಇರಬಹುದು ಹೀಗೂ ಇರಬಹುದು ಭಾಷೆಯಿಲ್ಲದ ಜೀವಗಳು ದಾವೆ ಹೂಡಲಾರವು   ಎದೆ ಕೊರಳು ಗಲ್ಲ, ಬೆನ್ನು ಆತುಕೊಳ್ಳುವ...

 
 
 
ಹಾಕಿ ಹಾಕಿ

ಒಂದು   ಹಾಲಲ್ಲಾದರೂ ಹಾಕಿ ನೀರಲ್ಲಾದರೂ ಹಾಕಿ ಮೊದಲು ಒಂದು ಗೋಲು ಹಾಕಿ   ಆಗ ಹೀಗಿರಲಿಲ್ಲ ಧ್ಯಾನವಿದ್ದ ಕಾಲದಲ್ಲಿ ಚಂದ್ರ ನಗುತ್ತಲೇ ಇದ್ದ   ಚಂದ್ರ ನಗದಿದ್ದರೇನು...

 
 
 

Comments


©2021 by G K RAVEENDRAKUMAR. Proudly created with Wix.com

bottom of page